ಹೊಸಪೇಟೆ:- ಎರಡು ವರ್ಷದ ಹಿಂದೆ ನನ್ನ, ಸಿದ್ದರಾಮಯ್ಯ ಹಾಗೂ ನಮ್ಮ ಪಕ್ಷದ ನಾಯಕರುಗಳ ಮೇಲೆ ವಿಶ್ವಾಸವನ್ನಿಟ್ಟು, ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ, ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ 136 ಸೀಟನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳಿಸಿ ನಿಮ್ಮ ಋಣವನ್ನು ತೀರಿಸಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಡಿ.ಕೆ ಶಿವಕುಮಾರ್ ಜನತೆಗೆ ಧನ್ಯವಾದ ಅರ್ಪಿಸಿದರು.
ಹೊಸಪೇಟೆಯಲ್ಲಿ ನಡೆದ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತು 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಇದೀಗ ಆರನೇಯದ್ದಾದ ಈ ಭೂ ಗ್ಯಾರಂಟಿಯನ್ನು ಕೊಟ್ಟು ಐತಿಹಾಸಿಕ ಕಾರ್ಯಕ್ರವನ್ನು ಮಾಡಿ ಇತಿಹಾಸದ ಪುಟಕ್ಕೆ ಕಾಂಗ್ರೆಸ್ ಪಕ್ಷ ಸೇರಿದೆ. ಈಗಾಗಲೇ ಮಲ್ಲಿಕಾರ್ಜುನ ಖರ್ಗೆಯವರು ಆದೇಶವನ್ನು ಕೊಟ್ಟಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೂ ಈ ಪಂಚ ಗ್ಯಾರಂಟಿಗಳನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಡಿಕೆಶಿ ಖಚಿತಪಡಿಸಿದರು.
ಇನ್ನು ಆರನೇ ಗ್ಯಾರಂಟಿ ಬಗ್ಗೆ ಮಾತನಾಡಿದ ಡಿಕೆಶಿ, ನಮ್ಮ ಗ್ರಾಮೀಣ ಪ್ರದೇಶದ ಜನರು ಬಡವರು 50-60 ವರ್ಷದಿಂದ ಭೂಮಿಯಲ್ಲಿ ಆಸ್ತಿ ಪಟ್ಟ ಇಲ್ಲದೇ ಹೋದವರಿಗೆ 6 ನೇ ಗ್ಯಾರಂಟಿಯನ್ನು ಸಚಿವ ಕೃಷ್ಣೇಬೈರೇಗೌಡರ ನೇತೃತ್ವದಲ್ಲಿ ಜಾರಿಗೆ ತರುತ್ತಿದ್ದೇವೆ. ಈಗಾಗಲೇ ನಗರಗಳಲ್ಲೂ ಕೂಡ ನಾನು, ಬೈರತಿ ಸುರೇಶ್ ಹಾಗೂ ರಹೀಂ ಖಾನ್ ಅವರು ಎಲ್ಲರ ಆಸ್ತಿಗಳನ್ನು ಸರಿ ಮಾಡಿ ಅವರ ಖಾತೆಗಳನ್ನು ಸರಿ ಮಾಡಿ ಎಲ್ಲವರನ್ನು ಅವರ ಸ್ವತ್ತನ್ನು ಅವರಿಗೆ ಕೊಡುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ 7 ಗ್ಯಾರಂಟಿಯನ್ನು ಕೊಡಲು ನಾವು ಬದ್ಧವಾಗಿದ್ದೇವೆ ಎಂದರು.
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲ ವರ್ಗದವರ ಬಗ್ಗೆ ಆಲೋಚನೆಗಳನ್ನು ಮಾಡುತ್ತೇವೆ. ಜನರ ಬದುಕಿಗೋಸ್ಕರ ಕೊಟ್ಟಿರುವ ಗ್ಯಾರಂಟಿಗಳಾಗಿವೆ. ಭ್ರಷ್ಟಾಚಾರಕ್ಕೆ ಇಂದು ಬೇಲಿ ಹಾಕಿದ್ದೇವೆ. ಸೋನಿಯಾ ಗಾಂಧಿಯವರು ಈ ಜಿಲ್ಲೆಗೆ ಬಂದು ವಿದ್ಯುಚ್ಛಕ್ಕಿಯ ಆರ್ಟಿಪಿಎಸ್ ಅನ್ನು ಮಾಡಿ 10 ಸಾವಿರ ಕೋಟಿ ರೂ.ಗಳ ಬಂಡವಾಳವನ್ನು ಈ ಜಿಲ್ಲೆಗೆ ಕೊಟ್ಟರು ಎಂದರು.
ಇದೇ ವೇಳೆ ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ, ಭಾರತ್ ಜೋಡೋ ಯಾತ್ರೆಯಿಂದಾಗಿ ನಾವು ಎಲ್ಲ ಸೀಟ್ಗಳನ್ನು ಗೆದ್ದು ಇತಿಹಾಸದ ಪುಟಕ್ಕೆ ಸೇರಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 6 ಜನ ಸಂಸದರನ್ನು ಗೆಲ್ಲಿಸಿದ್ದೀರಿ. ಅತೀ ಹೆಚ್ಚು ಶಾಸಕರನ್ನು ಕೊಟ್ಟಿದ್ದೀರಿ. ಕಲ್ಯಾಣ ಕರ್ನಾಟಕ್ಕೋಸ್ಕರ ವರ್ಷಕ್ಕೆ 5 ಸಾವಿರ ಕೋಟಿಯನ್ನು ಕೊಡುತ್ತಿದ್ದಾರೆ. ವಿರೋಧ ಪಕ್ಷದವರು ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ, ಟೀಕೆಗಳು ಸಾಯುತ್ತವೆ. ನಮ್ಮ ಕೆಲಸಗಳು ಉಳಿಯುತ್ತವೆ. ಅದಕ್ಕೆ ಈ ಎಲ್ಲಾ ಯೋಜನೆಗಳೇ ಸಾಕ್ಷಿ ಎಂದ ಅವರು, ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಗ್ರಾಮೀಣ ಪಥವನ್ನು ನಿರ್ಮಾಣ ಮಾಡಲು ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದರು.