ಬೆಂಗಳೂರು

ಶಾಸಕರ ಬಹಿರಂಗ ಹೇಳಿಕೆ: ಸರ್ಕಾರದೊಳಗೆ ಬಣಗಳ ಸೃಷ್ಟಿ

ಬೆಂಗಳೂರು:- ಶಾಸಕರ ಅಸಮಾಧಾನ ಶಮನಕ್ಕಾಗಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ನಡೆಸುತ್ತಿರುವ ಶಾಸಕರೊಂದಿನ ಮುಖಾಮುಖಿ ಸಭೆಯಲ್ಲಿ ಬಣ ರಾಜಕಾರಣ ದೊಡ್ಡಮಟ್ಟದಲ್ಲೇ ಸ್ಫೋಟಗೊಂಡಿದ್ದು, ಕೆಲ ಶಾಸಕರು ಡಿ.ಕೆ. ಶಿವಕುಮಾರ್‌ ಅವರಿಗೆ ಮುಂದಿನ ಎರಡೂವರೆ ವರ್ಷ ಅವಕಾಶ ನೀಡಬೇಕು ಎಂದು ವಾದಿಸಿದರೆ, ಮತ್ತೆ ಕೆಲವರು ಸಿದ್ದರಾಮಯ್ಯ ಬದಲಾಯಿಸಿದರೆ ಸರ್ಕಾರವೇ ಇರಲ್ಲ ಎಂಬ ನೇರ ಎಚ್ಚರಿಕೆ ನೀಡಿದ್ದಾರೆ.

ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಸೇರಿ ಕೆಲ ಶಾಸಕರು ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪಿಸಿ, ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಸುರ್ಜೇವಾಲಾ ಎದುರು ನೇರವಾಗಿ ಮನವಿ ಮಾಡಿದ್ದರೆ. ಮಾಲೂರು ಶಾಸಕ ಕೆ.ವೈ ನಂಜೇಗೌಡ, ಅನಿಲ ಚಿಕ್ಕಮಾದು, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಸೇರಿ ಮತ್ತಿತರರು ಸಿದ್ದರಾಮಯ್ಯರನ್ನು ಬದಲಿಸಿದರೆ ಸರ್ಕಾರದ ಅಸ್ತಿತ್ವಕ್ಕೆ ಕಂಟಕ ಎದುರಾಗಲಿದೆ ಎಂಬರ್ಥದ ಸಂದೇಶ ರವಾನಿಸಿದರು ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಪರವಾಗಿ ಬಹಿರಂಗ ಬ್ಯಾಟ್‌ ಬೀಸುತ್ತಿರುವ ಇಕ್ಬಾಲ್‌ ಹುಸೇನ್‌, ಸುರ್ಜೇವಾಲಾ ಅವರ ಮುಂದೆಯೂ ವಿಷಯ ಪ್ರಸ್ತಾಪಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಪಕ್ಷ ಸಂಘಟನೆ ಮಾಡಿದ್ದಾರೆ, 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನಮಗೆಲ್ಲ ಬದಲಾವಣೆ ಬೇಕಿದ್ದು, ಡಿ.ಕೆ. ಶಿವಕುಮಾರ್‌ ರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಕೋರಿದ್ದಾರೆ. ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಕೂಡ ಸುರ್ಜೇವಾಲಾ ಅವರ ಬಳಿ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರೊಂದಿಗೆ ರಣದೀಪ್‌ಸಿಂಗ್‌ ಸುರ್ಜೇವಾಲಾ ಸಭೆ ನಡೆಸುವುದಕ್ಕೂ ಮುನ್ನ ಕೆಲವೇ ಕೆಲ ಶಾಸಕರು ಸಚಿವರು ಮತ್ತು ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿ ಮುಜುಗರವನ್ನುಂಟು ಮಾಡುತ್ತಿದ್ದರು. ಯಾರೂ ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಆದರೆ, ಸುರ್ಜೇವಾಲಾ ಸಭೆ ನಂತರ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಬಹಿರಂಗವಾಗುವಂತಾಗಿದೆ. ಹೈಕಮಾಂಡ್‌ ಸೂಚನೆ ನಂತರವೂ ಮುಖ್ಯಮಂತ್ರಿ ಬದಲಾವಣೆ ಕುರಿತು ಶಾಸಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ, ಸರ್ಕಾರದೊಳಗೆ ಬಣಗಳು ಸೃಷ್ಟಿಯಾಗಿರುವುದು ಬಯಲಾಗಿದೆ.

ಅನುದಾನ ಸಮಸ್ಯೆ, ಸಚಿವರ ಅಸಹಕಾರ, ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿ ಶಾಸಕರ ಸಮಸ್ಯೆ ಆಲಿಸಿ, ಸಮಾಧಾನಪಡಿಸಲು ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಳೆದೆರಡು ದಿನಗಳಿಂದ ಶಾಸಕರೊಂದಿಗೆ ಮುಖಾಮುಖಿ ಸಭೆ ನಡೆಸುತ್ತಿದ್ದಾರೆ. ಮಂಗಳವಾರ ರಾಮನಗರ, ಕೋಲಾರ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 20 ಶಾಸಕರೊಂದಿಗೆ ಮುಖಾಮುಖಿ ಸಭೆ ನಡೆಸಿದರು. ಈ ವೇಳೆ ಬಹುತೇಕ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಜತೆಗೆ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸ್ಥಾನದ ಬೇಡಿಕೆಯನ್ನು ಸುರ್ಜೇವಾಲಾ ಮುಂದಿಟ್ಟಿದ್ದಾರೆ.