ತೆಲಂಗಾಣ:- ಮಳೆರಾಯನ ಅಬ್ಬರ ಮುಂದುವರಿದಿದ್ದು, ವಾಯುಭಾರ ಕುಸಿತ, ಚಂಡಮಾರು ಪರಿಚಲನೆಯ ತೀವ್ರತೆ ಮತ್ತೆ ಹೆಚ್ಚಾಗಿದೆ. ಇದರಿಂದ ಮಳೆ ಆರ್ಭಟ ಕರಾವಳಿ ರಾಜ್ಯಗಳಿಗೆ ಮಾತ್ರವಲ್ಲದೇ ಉತ್ತರ ಹಾಗೂ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಮುಂದುವರಿಯಲಿದೆ. ಈಗಾಗಲೇ ರಜೆ ಘೋಷಿಸಿದ್ದ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಪ್ರಯುಕ್ತ ಶಾಲೆಗಳಿಗೆ ರಜೆ ನೀಡುವ ಸಾಧ್ಯತೆ ಇದೆ.
ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶ ಕರಾವಳಿಗಳು ಮತ್ತು ಬಂಗಾಳ ಕೊಲ್ಲಿಯ ವಾಯುವ್ಯ ಮತ್ತು ಮಧ್ಯ ಭಾಗದ ಪ್ರದೇಶಗಳಲ್ಲಿ ಆಗಸ್ಟ್ 15 ಬೆಳಗ್ಗೆ 05.30 ಗಂಟೆಗೆ ಕಡಿಮೆ ಚಂಡಮಾರುತ ಪರಿಚಲನೆ ಮತ್ತೆ ಕೊಂಚ ತೀವ್ರವಾಗಿದೆ. ಇದು ಸಮುದ್ರಮಟ್ಟದಿಂದ 7.6 ಕಿ.ಮೀ ವರೆಗೆ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ದಕ್ಷಿಣಕ್ಕೆ ಓರೆಯಾಗಲಿದೆ. ಇದರ ಪ್ರಭಾವ ದಕ್ಷಿಣ ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಭಾಗದ ಮೇಲೂ ಆಗಲಿದೆ. ವ್ಯಾಪಕ ಮಳೆ ಆಗಲಿದೆ.
ರಾಜಸ್ತಾನ್ ಪೂರ್ವ ಪ್ರದೇಶ, ಮಧ್ಯ ಮಹಾರಾಷ್ಟ್ರ, ತೆಲಂಗಾಣ, ಒಡಿಶಾ, ಛತ್ತೀಸ್ಗಢ ಮತ್ತು ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಹೆಚ್ಚು ಮಳೆ ನಿರೀಕ್ಷೆ ಇದೆ. ಇದರಿಂದಾಗಿ ಮುಂದಿನ ಎರಡು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಇದರೊಂದಿಗೆ ಆಂಧ್ರಪ್ರದೇಶದ ಕರಾವಳಿ, ಕರ್ನಾಟಕ ಕರಾವಳಿ, ಗುಜರಾತ್ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕೇರಳ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಕರ್ನಾಟಕ ಉತ್ತರ ಒಳನಾಡು ಪ್ರದೇಶಗಳು, ಹಾಗೂ ಪಂಜಾಬ್ ಮತ್ತು ಉತ್ತರಾಖಂಡ ಸ್ಥಳಗಳಲ್ಲಿ ಮುಂದಿನ 3-5 ದಿನ ಭಾರೀ ಮಳೆ ಆಗಲಿದ್ದು, ‘ಯೆಲ್ಲೋ ಅಲರ್ಟ್’ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಮೂರು ದಿನ ಆಂಧ್ರ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಕರಾವಳಿ ಕರ್ನಾಟಕ, ಜಮ್ಮು-ಕಾಶ್ಮೀರ ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಮೂಲಕ ಮುಂದಿನ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Leave feedback about this