ಬೆಂಗಳೂರು:- ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು(ಜಾತಿಗಣತಿ)
ಪ್ರಾರಂಭವಾದಾಗಿನಿಂದಲೂ ಸಮೀಕ್ಷೆಯು ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲವೆಂದು ಆಧಾರಗಳ ಸಹಿತ ಮಹಾಸಭೆಯು ಪ್ರತಿಭಟಿಸುತ್ತಲೇ ಬಂದಿರುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಹೆಚ್.ಎಂ ರೇಣುಕಾ ಪ್ರಸನ್ನ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಅವರ ಪತ್ರಿಕಾ ಹೇಳಿಕೆಯಲ್ಲಿ ಜಾತಿ ಗಣತಿಗೆ ಮಹಾಸಭೆಯ ವಿರೋಧವಿಲ್ಲ. ಆದರೆ, ವೈಜ್ಞಾನಿಕವಾಗಿ, ಸಮಗ್ರವಾಗಿ, ಆಧಾರ ಜೋಡಣೆ, ಎ.ಐ.ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮರು ಸಮೀಕ್ಷೆ (ಜಾತಿಗಣತಿ) ನಡೆಸುವಂತೆ ಮಹಾಸಭೆಯು ರಾಜ್ಯ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳಿಗೆ ಮನವಿ ಮಾಡುತ್ತಲೇ ಬಂದಿರುತ್ತೇವೆ.
ಮಹಾಸಭೆಯ ನಿರಂತರ ಹೋರಾಟದ ಫಲವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆಯವರು, ರಾಹುಲ್ ಗಾಂಧಿಯವರು, ಕೆ.ಸಿ. ವೇಣುಗೋಪಾಲರವರು ಹಾಗೂ ಇನ್ನಿತರೇ ಪಕ್ಷದ ನಾಯಕರುಗಳು ರಾಜ್ಯದಲ್ಲಿ ಮರು ಸಮೀಕ್ಷೆ (ಜಾತಿಗಣತಿ) ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ
ನೀಡಿರುವುದನ್ನು ಮಹಾಸಭೆಯು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಬರೆದಿರುವ ಅವರು, ಈ ಹಿಂದೆ ಆಗಿರುವ ಲೋಪ-ದೋಷಗಳನ್ನು ಸರಿಪಡಿಸಿಕೊಂಡು ಎಲ್ಲರ ಸಹಕಾರದೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರ್ವರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ರಾಜ್ಯ ಸರ್ಕಾರ ಗಣತಿಯನ್ನು ನಡೆಸಿದಲ್ಲಿ ಮಹಾಸಭೆಯ ಸಂಪೂರ್ಣ ಸಹಕಾರವಿರುತ್ತದೆಂದು ಮಹಾಸಭೆಯ ಮಾನ್ಯ ಡಾ.ಶಾಮನೂರು ಶಿವಶಂಕರಪ್ಪನವರು ತಿಳಿಸಿರುತ್ತಾರೆ ಎಂದು ಹೇಳಿದ್ದಾರೆ.