ಬೆಂಗಳೂರು:- ನಟ ದರ್ಶನ್ ಅಭಿಮಾನಿಗಳ ದುರ್ವರ್ತನೆ ವಿರುದ್ಧ ನಟಿ ರಮ್ಯಾ ಸಾರಿರುವ ಸಮರಕ್ಕೆ ದೊಡ್ಮನೆ ಬೆಂಬಲ ದೊರೆತಿದ್ದು, ನಟ ಶಿವರಾಜ್ ಕುಮಾರ್ ದಂಪತಿ ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ.
YES…ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ನಟ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿ ಟೀಕೆ ಮಾಡುತ್ತಿದ್ದು, ಇದರ ವಿರುದ್ಧ ನಟಿ ಬಹಿರಂಗವಾಗಿಯೇ ಸಮರ ಸಾರಿದ್ದು, ಈ ಸಂಬಂಧ ಪೊಲೀಸ್ ಠಾಣೆ ಏರಿ ದೂರು ನೀಡಿರುವ ನಟಿ ರಮ್ಯಾಗೆ ಇದೀಗ ಎಲ್ಲಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ರಮ್ಯಾ ಬಗ್ಗೆ ದರ್ಶನ್ ಅಭಿಮಾನಿಗಳು ಮಾಡಿರುವ ಅಶ್ಲೀಲ ಕಮೆಂಟ್ಗಳನ್ನು ಖಂಡಿಸಿ ಇದೀಗ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಸಹ ನಟಿ ರಮ್ಯಾ ಅವರ ಬೆಂಬಲಕ್ಕೆ ನಿಂತಿದ್ದಾರೆ.
ದರ್ಶನ್ ಅಭಿಮಾನಿಗಳ ದುರ್ವರ್ತನೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಖಂಡಿಸುತ್ತಿದ್ದ ರಮ್ಯಾ ಇದೀಗ ಕಾನೂನು ಮೊರೆ ಹೋಗಿದ್ದು, ಪೊಲೀಸರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಅಗತ್ಯ ದಾಖಲೆಗಳನ್ನು ನೀಡಿದ್ದಾರೆ. ಪ್ರಮೋದ ಗೌಡ ಸೇರಿದಂತೆ 43 ಜನರ ವಿರುದ್ಧ FIR ದಾಖಲಾಗಿದೆ.
ಇನ್ನು ನಟಿ ರಮ್ಯಾ ವಿರುದ್ಧ ಆನ್ಲೈನ್ ಟ್ರೋಲಿಂಗ್ ಮತ್ತು ಅಶ್ಲೀಲ ಪದ ಬಳಕೆ ವಿಚಾರವಾಗಿ ನಟ ಶಿವರಾಜ್ ಕುಮಾರ್ ಕೆಂಡಾಮಂಡಲಾಗಿದ್ದು, ಈ ಸಮರದಲ್ಲಿ ರಮ್ಯಾಗೆ ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಿವಣ್ಣ, ‘ರಮ್ಯಾ, ನಿಮ್ಮ ನಿಲುವು ಸರಿಯಿದೆ, ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ’ ಎಂದಿದ್ದಾರೆ. ಮುಂದುವರೆದು, ‘ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಹೀಗೆ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು’ ಎಂದು ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಂತೆಯೇ ‘ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಷಿಯಲ್ ಮೀಡಿಯಾ ತುಂಬಾ ಬಲಷ್ಠವಾದ ಅಸ್ತ್ರ ಅದನ್ನು ತಮ್ಮ ಏಳಿಗಾಗಿ ಬಳಸಬೇಕೇ ಹೊರತು ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲವು ಸರಿಯದೆ, ನಿಮ್ಮ ಜೊತೆ ನಾವು ನಿಲ್ಲುತ್ತೇವೆ’ ಎಂದಿದ್ದಾರೆ.
ಇನ್ನು ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಇಬ್ಬರೂ ಸಹ ಈ ಸಂದೇಶವನ್ನು ಹಂಚಿಕೊಂಡಿದ್ದು, ಇಬ್ಬರೂ ಸಹ ರಮ್ಯಾ ಪರವಾಗಿ ನಿಂತಿದ್ದಾರೆ. ಆ ಮೂಲಕ ದೊಡ್ಮನೆ ಕುಟುಂಬದವರು ಸಂತ್ರಸ್ತ ನಟಿಯ ಪರವಾಗಿ ನಿಂತಿದ್ದಾರೆ.
ಧನ್ಯವಾದ ಹೇಳಿದ ರಮ್ಯಾ: ಶಿವಣ್ಣನ ಕುಟುಂಬದಿಂದ ಬಂದ ಬೆಂಬಲಕ್ಕೆ ನಟಿ ರಮ್ಯಾ ಧನ್ಯವಾದ ಹೇಳಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Leave feedback about this