ಬೆಂಗಳೂರು

ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ: ನಾವುಗಳು ಯಾರೂ ಈಗ ಆತುರದಲ್ಲಿ ಇಲ್ಲ.- ಡಿಕೆಶಿ

ಬೆಂಗಳೂರು:- ರಣದೀಪ್ ಸಿಂಗ್ ಸುರ್ಜೆವಾಲ ಅವರು ಕಾಂಗ್ರೆಸ್ ಶಾಸಕರ ಜೊತೆ ಮಾಡುತ್ತಿರುವ ಸಭೆಯ ಬಗ್ಗೆ ಯಾರಿಗೂ ಆತಂಕ ಬೇಡ. ರಾಷ್ಟ್ರಾದ್ಯಂತ ನಾವು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದು, ಸಂಘಟನೆ ಹಿನ್ನೆಲೆಯಲ್ಲಿ ಈ ಸಭೆ ಮಾಡಲಾಗುತ್ತಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಸಂಘಟನೆ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಶಕ್ತಿ ತುಂಬಲು ಹೇಳಿದ್ದಾರೆ. ಖರ್ಗೆ ಅವರು, ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ದೆಹಲಿಯಲ್ಲಿ ಸಭೆ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ಕಚೇರಿ ನಿರ್ಮಾಣದಿಂದ ಪಕ್ಷ ಸಂಘಟನೆವರೆಗೂ ಎಲ್ಲಾ ಜವಾಬ್ದಾರಿಯನ್ನು ತಿಳಿಸಿದ್ದಾರೆ ಎಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ ಶಿವಕುಮಾರ್ ಸುದ್ದಿಗಾರರ ಮಾತನಾಡಿದರು.

ಸಂಘಟನೆ ಕುರಿತು ಮಾರ್ಗದರ್ಶನ ನೀಡಲು ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸಿದ್ದು, ಅವರ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಕೆಲವು ಶಾಸಕರ ಹೇಳಿಕೆಗಳ ಮಧ್ಯೆ ಪಕ್ಷದಲ್ಲಿ ಶಿಸ್ತು ತರಲು ಪ್ರಯತ್ನಿಸುತ್ತಿದ್ದಾರೆ. ಇದರ ಹೊರತಾಗಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ಇಲ್ಲ. ನಾವುಗಳು ಯಾರೂ ಈಗ ಆತುರದಲ್ಲಿ ಇಲ್ಲ. ನಮಗೆ 2028 ಬಹಳ ಮುಖ್ಯ. ಅದೇ ಮುಖ್ಯ ಎಂದು ಸ್ಪಷ್ಟಪಡಿಸಿದರು.

ಇಕ್ಬಾಲ್ ಹುಸೇನ್ ನೀವು ಸಿಎಂ ಆಗುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, ಅವರಿಗೆ ನಾನೇ ನೋಟೀಸ್ ನೀಡುತ್ತೇನೆ. ನಾನು ಸಿಎಂ ಆಗುತ್ತೇನೆ ಎಂದು ಯಾರೂ ಹೇಳುವ ಅಗತ್ಯವಿಲ್ಲ. ಯಾರೊಬ್ಬರೂ ಮಾಧ್ಯಮಗಳ ಮುಂದೆ ಮಾತನಾಡುವಂತಿಲ್ಲ. ಇಕ್ಬಾಲ್ ಹುಸೇನ್, ಬಿ.ಆರ್ ಪಾಟೀಲ್, ಬಾಲಕೃಷ್ಣ ಯಾರೇ ಆಗಲಿ, ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಯಾರೂ ಮಾತನಾಡಬಾರದು. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸಬೇಕು ಎಂದು ತಿಳಿಸಿದರು.

ಮಾಲೂರು ಶಾಸಕರಾದ ನಂಜೇಗೌಡರಿಗೆ ನೀವು ಕೆಎಂಎಫ್ ಸ್ಥಾನ ಕೊಡಿಸುವುದಾಗಿ ಹೇಳಿದ್ದೀರಿ ಎಂದು ಸ್ವತಃ ಶಾಸಕರೇ ಹೇಳಿದ್ದಾರೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ರಾಜಕೀಯ ಬೆಳವಣಿಗೆಗಳೇ ಬೇರೆ, ಸಹಕಾರ ಕ್ಷೇತ್ರವೇ ಬೇರೆ. ಅದರ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ ಎಂದು ಹೇಳಿ ಮಾತು ಕೊನೆಗೊಳಿಸಿದರು.