ಚಿಕ್ಕಮಗಳೂರು

ಪತ್ರಿಕಾ ರಂಗವು ಪವಿತ್ರವಾದ ಕ್ಷೇತ್ರವಾಗಿದೆ.- ಡಾ.ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು

ಚಿಕ್ಕಮಗಳೂರು:- ಜನರ ನೋವು, ನಲಿವುಗಳನ್ನು ಪತ್ರಿಕೆಗಳ ಮೂಲಕ ಸರ್ಕಾರಕ್ಕೆ ಮುಟ್ಟಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ಅವರು ಭಾನುವಾರ ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಹಾಗೂ ನೂತನವಾಗಿ ಬಾಳೆಹೊನ್ನೂರಿನಲ್ಲಿ ನಿರ್ಮಿಸಲಿರುವ ಸಮುದಾಯ ಭವನದ ಶಂಕುಸ್ಥಾಪನೆ ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು. ಪತ್ರಿಕಾ ರಂಗವು ಪವಿತ್ರವಾದ ಕ್ಷೇತ್ರವಾಗಿದೆ, ಒಂದು ಹನಿಮಸಿ ಕೋಟಿ ಜನರಿಗೂ ಬಿಸಿ ಮುಟ್ಟಿಸಬಲ್ಲದು. ತಾಲೂಕು ಪತ್ರಕರ್ತರ ಸಂಘದಿಂದ ಈಗಾಗಲೇ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಕೃಷಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಬಾಳೆಹೊನ್ನೂರಿನ ಪತ್ರಕರ್ತರಿಗೆ ಪತ್ರಿಕಾ ಭವನ ಬೇಕು ಎಂದು ಹಲವಾರು ವರ್ಷಗಳ ಬೇಡಿಕೆ ಈಡೇರಿದೆ. ದೊಡ್ಡ ನಿವೇಶವನ್ನು ಗ್ರಾಮ ಪಂಚಾಯಿತಿಯವರು ನೀಡಿದ್ದಾರೆ. ಪತ್ರಿಕಾ ಭವನ ಕಟ್ಟಲು ರಂಭಾಪುರಿ ಮಠದಿಂದಲೂ 1 ಲಕ್ಷ ರೂಪಾಯಿ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಶಾಸಕ ಟಿ.ಡಿ.ರಾಜೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಸರ್ಕಾರವು ಜನರಿಗೆ ಮೂಲಭೂತ ಸೌಕರ್ಯ ನೀಡಲು ವಿಫಲವಾದರೆ ಪರ್ತಕರ್ತರು ತಮ್ಮ ಲೇಖನ, ವರದಿಯ ಮೂಲಕ ಎಚ್ಚರಿಸಬೇಕು. ಪತ್ರಕರ್ತರ ಲೇಖನ ಖಡ್ಗಕ್ಕಿಂತ ಹರಿತವಾಗಿದೆ.ಆದರೆ, ಏಕಮುಖಿ ವರದಿ ಮಾಡಬಾರದು. ಟಿ.ವಿ ಮಾಧ್ಯಮ ಬಂದ ತಕ್ಷಣ ಪತ್ರಿಕೆಗಳು ನಿಂತು ಹೋಗುತ್ತದೆ ಎಂಬುದು ಹಲವರ ಭಾವನೆಯಾಗಿತ್ತು.ಆದರೆ, ಪತ್ರಿಕೆಗಳು ಈಗಲೂ ತನ್ನ ಅಸ್ತಿತ್ವ ಉಳಿಸಿಕೊಂಡು ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ನಾನು ಈ ಹಿಂದೆ ಭರವಸೆ ನೀಡಿದಂತೆ ಬಾಳೆಹೊನ್ನೂರಿನ ಪತ್ರಿಕಾ ಭವನಕ್ಕೆ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದಿಂದ 1 ಲಕ್ಷ ರೂಪಾಯಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಡಿ.ಎನ್‌.ಜೀವರಾಜ್ ಪತ್ರಿಕಾ ಭವನದ ನೀಲಿ ನಕ್ಷೆ ಅನಾವರಣಗೊಳಿಸಿ ಮಾತನಾಡಿ, ಬಾಳೆಹೊನ್ನೂರಿನಲ್ಲಿ ನೂತನ ಪತ್ರಿಕಾ ಭವನವು ಪಟ್ಟಣದ ಹೃದಯ ಭಾಗದಲ್ಲೇ ನಿರ್ಮಾಣವಾಗಲಿದೆ. ನೂತನ ಭವನಕ್ಕೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮೂಲಕ ಅನುದಾನ ಕೊಡಿಸುತ್ತೇನೆ. ಟಿ.ವಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಸುದ್ದಿಗಳು ಬಂದರೂ ಈಗಲೂ ಜನರಿಗೆ ನಿಖರವಾದ ಸುದ್ದಿ ನೀಡುತ್ತಿರುವುದು ದಿನ ಪತ್ರಿಕೆಗಳೇ ಆಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ಮಾತನಾಡಿ, ಪತ್ರಿಕೆಗಳು ಹೊಸ, ಹೊಸ ತಂತ್ರಜ್ಞಾನ ಕಂಡುಕೊಳ್ಳಬೇಕಾಗಿದೆ. ಯುವ ಪತ್ರಕರ್ತರಿಗೆ ತರಬೇತಿ ಅಗತ್ಯವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ದೊಡ್ಡದಾಗಿದೆ. ನರಸಿಂಹರಾಜಪುರ ತಾಲೂಕು ಪತ್ರಕರ್ತರು ಪತ್ರಿಕಾ ವೃತ್ತಿಗೆ ಗೌರವ ತಂದುಕೊಟ್ಟಿದ್ದಾರೆ. ಸರ್ಕಾರದಿಂದ ಆಗುವ ಕೆಲಸವನ್ನ ನನ್ನ ಗಮನಕ್ಕೆ ತಂದರೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ವಿದ್ಯಾರ್ಥಿ ವೇತನ ನೀಡಿ ಮಾತನಾಡಿದರು.

ಅತಿಥಿಗಳಾಗಿದ್ದ ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಚಂದ್ರ, ಅಮ್ಮ ಪೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್‌.ಸಚಿನ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಮುಖಂಡರಾದ ವೆನಿಲ್ಲಾ ಭಾಸ್ಕರ್, ಮಾಲತೇಶ್ ಸಿಗಸೆ, ಎಂ.ಎಸ್‌.ಚನ್ನಕೇಶವ್‌, ಟಿ.ಎಂ.ಉಮೇಶ್ ಕಲ್ಮಕ್ಕಿ, ಮಹಮ್ಮದ್ ಹನೀಫ್, ಪ್ರಭಾಕರ ಪ್ರಣಸ್ವಿ, ಕೌಶಿಕ್ ಪಟೇಲ್, ಕೆ.ಕೆ.ವೆಂಕಟೇಶ್, ಚಂದ್ರಮ್ಮ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ದಿ.ಬಿ.ಎಸ್.ಸುಧಾಕರರಾವ್ ಸ್ಮರಣಾರ್ಥ ನೀಡುವ ಹಿರಿಯ ಪತ್ರಕರ್ತ ಪ್ರಶಸ್ತಿಯನ್ನು

ಪ್ರವೀಣ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಸಿಂಹನಗದ್ದೆ ಬಸ್ತಿಮಠದಿಂದ ನೀಡುವ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಯನ್ನು ಬಿ.ಎಸ್.ನಾಗರಾಜಭಟ್ ಅವರಿಗೆ ನೀಡಿ ಗೌರವಿಸಲಾಯಿತು. ಶಿವಾನಂದ ಭಟ್ ಸ್ವಾಗತಿಸಿದರು. ಸುರೇಂದ್ರ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಭಟ್ ವಂದಿಸಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video