ಬೆಳಗಾವಿ:- ರಾಜ್ಯ ರಾಜಕೀಯದಲ್ಲಿ ಬೆಳಗಾವಿಯ ರಾಜಕಾರಣವು ಯಾವಾಗಲೂ ವಿಶಿಷ್ಟವಾಗಿರುತ್ತದೆ. ಜಾರಕಿಹೊಳಿ ಸಹೋದರರ ರಾಜಕೀಯ ಪ್ರಾಬಲ್ಯವು ಜಿಲ್ಲೆಯಲ್ಲಿ ಗಟ್ಟಿಯಾಗಿದ್ದು, ಇದನ್ನು ಬೇರ್ಪಡಿಸುವವುದು ಸುಲಭವಲ್ಲ ಎಂಬುದು ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ದೈನಂದಿನ ಚರ್ಚಾ ವಿಷಯ.
ಆದರೆ, ಇದೀಗ ಬೆಳಗಾವಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ರಾಜಕೀಯ ತಿರುವು ಸೃಷ್ಟಿಯಾಗಿದೆ. ಜಾರಕಿಹೊಳಿ ಸಹೋದರರ ಪ್ರಾಬಲ್ಯವನ್ನು ದುರ್ಬಲಗೊಳಿಸಲು ಲಿಂಗಾಯತ ನಾಯಕರು ಪಕ್ಷಾತೀತವಾಗಿ ಒಗ್ಗಟ್ಟಾಗಿ, ಮಹಾರಾಷ್ಟ್ರದ ಪ್ರಮುಖ ಮಠವೊಂದರಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಬೆಳಗಾವಿಯ ಬಹುತೇಕ ಲಿಂಗಾಯತ ನಾಯಕರು ಈ ರಹಸ್ಯ ಸಭೆಯಲ್ಲಿ ಭಾಗವಹಿಸಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನಂತಹ ಪಕ್ಷಗಳಿಗೆ ಸೀಮಿತವಾಗದೆ, ಪಕ್ಷಾತೀತವಾಗಿ ಒಂದಾಗಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಪ್ರಭಾವವನ್ನು ಕಡಿಮೆ ಮಾಡಿ, ಲಿಂಗಾಯತ ಸಮುದಾಯದ ಹಿಡಿತವನ್ನು ಸ್ಥಾಪಿಸುವುದಾಗಿದೆ ಈ ಸಭೆಯ ಮುಖ್ಯ ಉದ್ದೇಶ. ಆಶ್ಚರ್ಯಕರ ಸಂಗತಿಯೆಂದರೆ, ಜಾರಕಿಹೊಳಿ ಸಹೋದರರ ಗುಂಪಿನ ಭಾಗವಾಗಿದ್ದ ಕೆಲವು ನಾಯಕರು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವಿನ ಮೂಲಕ ಜಿಲ್ಲೆಯ ರಾಜಕೀಯ ನಿಯಂತ್ರಣವನ್ನು ಸಾಧಿಸುವ ಕುರಿತು ಮಹತ್ವದ ಚರ್ಚೆ ನಡೆದಿದೆ. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಜಾರಕಿಹೊಳಿ ಸಹೋದರರ ಪ್ರಭಾವವನ್ನು ತಗ್ಗಿಸುವ ರಣತಂತ್ರವನ್ನು ರೂಪಿಸಲಾಗಿದೆ. ಸಭೆಯ ವಿವರಗಳು ಗೌಪ್ಯವಾಗಿರಲಿ ಎಂದು ನಾಯಕರು ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪರವಾಗಿ ಜಾರಕಿಹೊಳಿ ಸಹೋದರರಾದ ಸಚಿವ ಸತೀಶ ಜಾರಕಿಹೊಳಿ, ಬಿಜೆಪಿಯ ಪರವಾಗಿ ಬಾಲಚಂದ್ರ ಜಾರಕಿಹೊಳಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತೀವ್ರ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಲಿಂಗಾಯತ ನಾಯಕರ ಈ ರಹಸ್ಯ ಒಗ್ಗಟ್ಟು ಜಾರಕಿಹೊಳಿಯವರಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಈ ರಹಸ್ಯ ಸಭೆಯು ಬೆಳಗಾವಿಯ ರಾಜಕೀಯದಲ್ಲಿ ಹೊಸ ತಿರುವನ್ನು ತಂದಿದ್ದು, ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
Leave feedback about this