ಚಿಕ್ಕಮಗಳೂರು:- ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಟ್ಟದೇ ಮಳೆ ಆಗುತ್ತಿದೆ. ಇಡೀ ವಾತಾವರಣವೇ ಬದಲಾಗಿತ್ತು. ನಿರಂತರ ಮಳೆ, ಚಳಿ ಕಾರಣದಿಂದಾಗಿ ಜನರ ಆರೋಗ್ಯದಲ್ಲಿ ಏರು ಪೇರಾಗಿತ್ತು. ಜಡಿ ಮಳೆ, ಕೆಲವೆಡೆ ಭಾರೀ ಮಳೆಗೆ ಜನರು ಹೈರಾಣಾಗಿದ್ದು, ಈವಾರ ರಾಜ್ಯದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಿದೆ. ಇದೀಗ ಹವಾಮಾನ ಇಲಾಖೆ ರಾಜ್ಯದ ಜನರಿಗೆ ಶುಭ ಸುದ್ದಿ ನೀಡಿದೆ.
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆ ಮುಂದುವರಿದು ಸಾಕಷ್ಟು ಸಮಸ್ಯೆ ಸೃಷ್ಟಿಸಿತ್ತು. ಭಾಗಮಂಡಳ, ಕೊಡಗಿನ ಇತರ ಭಾಗಗಳಲ್ಲಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ ಅನೇಕ ಕಡೆ ಪ್ರವಾಹ ಉಂಟಾಗಿತ್ತು. ಶಾಲೆ, ಅಂಗನವಾಡಿಗಳಿಗೆ ಪದೇ ಪದೇ ರಜೆ ಘೋಷಿಸಲಾಗಿದೆ. ಇದೀಗ ಭಾರೀ ಮಳೆ ಅಬ್ಬರ ತಗ್ಗಿದೆ. ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಸದ್ಯಕ್ಕೆ ತೀವ್ರ ರೂಪದ ಮಳೆ ಎಚ್ಚರಿಕೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಚಂಡಮಾರುತ ಪ್ರಸರಣ, ವಾಯುಭಾರ ಕುಸಿತದ ಅಬ್ಬರ ಕಡಿಮೆ ಆಗಿದೆ. ವಾರಗಳಿಂದ ಹೆಚ್ಚುತ್ತಿದ್ದ ಅದರ ತೀವ್ರತೆ ಕ್ರಮೇಣ ಕುಂದಿದೆ. ಹೀಗಾಗಿ ರಾಜ್ಯದಲ್ಲಿ ಸಾಮಾನ್ಯ ಮಳೆ ಆಗಲಿದೆ. ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಧಾರವಾಡ, ಬೆಳಗಾವಿ, ವಿಜಯಪುರ, ಚಾಮರಾಜನಗರ, ಮೈಸೂರು, ಮಂಡ್ಯ ಮುಂತಾದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಬರಬಹುದು.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಅಲ್ಲಲ್ಲಿ ಇನ್ನು ಕೆಲವು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆ ಆಗುವ ಮುನ್ಸೂಚನೆ ಇದೆ. ಇದರ ಹೊರತು ಗಂಭೀರ ಸ್ವರೂಪದ ಬಿರುಗಾಳಿ ಸಹಿತ ಮಳೆಯ ಲಕ್ಷಣಗಳು ಯಾವುದು ಇಲ್ಲ ಎಂದು ಬುಧವಾರದ ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಚಳಿ ಕಡಿಮೆ ಆಗಿಲ್ಲ. ಆದರೆ, ಆಗಾಗ ಸುರಿಯುತ್ತಿದ್ದ ಮಳೆ ಪ್ರಯಾಣ ಇಳಿಕೆ ಆಗಿದೆ. ಆಗಾಗ ಬಿಸಿಲಿನ ದರ್ಶನವಾದರೂ ಸಹಿತ ಚಳಿ ಪ್ರಯಾಣ ಹೆಚ್ಚಾಗಿದೆ. ತಾಪಮಾನ ಈ ವಾರಾಂತ್ಯಕ್ಕೆ ಸಹಜ ಸ್ಥಿತಿಗೆ ಬರಬಹುದು. ಅಲ್ಲಿಯವರೆಗೆ ಕನಿಷ್ಠ 21-22 ಹಾಗೂ ಗರಿಷ್ಠ 29-30 ಡಿಗ್ರಿ ಸೆಲ್ಸಿಯಸ್ ದಾಖಲಾತಿ ಮುಂದುವರಿಯುತ್ತದೆ ಎಂಬ ಮಾಹಿತಿ ಇದೆ.
Leave feedback about this