ಚಿಕ್ಕಮಗಳೂರು:- ರಾಜ್ಯದಲ್ಲಿ ದಲಿತ ಸಿಎಂ ಕುರಿತ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಲೋಗೋ ಬಿಡುಗಡೆ ಸಮಾರಂಭದಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಕೇಸರಿ ಶಾಲು ಹಾಕಿಕೊಂಡಿರುವುದು ಗಣಪತಿಗಾಗಿ, ನನ್ನ ಧರ್ಮಕ್ಕಾಗಿ. ನನ್ನ ಜೊತೆ ನನ್ನ ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಹಿಂದೂವಾಗಿ, ದಲಿತೆಯಾಗಿ, ಮಹಿಳೆಯಾಗಿ ನನ್ನನ್ನು ದೇವರು ಇಲ್ಲಿ ಹುಟ್ಟಿಸಿದ್ದಾನೆ. ನಾನು ಆ ಅಸ್ತಿತ್ವದಲ್ಲಿ ಇಲ್ಲಿಗೆ ಬಂದಿದ್ದೇನೆ. ಶಾಸಕಿಯಾಗಿ ಪಕ್ಷವನ್ನು ಪ್ರತಿನಿಧಿಸುವುದು ಆಮೇಲೆ. ಈಗ ನಾನು ಗಣಪತಿ ಸಮಿತಿ ಕಾರ್ಯಾಧ್ಯಕ್ಷೆಯಾಗಿ ಇಲ್ಲಿ ಬಂದಿದ್ದೇನೆ. ನಾನು ಕಾಂಗ್ರೆಸ್ ನಲ್ಲೇ ಇರುತ್ತೇನೋ, ಬಿಜೆಪಿ, ಬಿಎಸ್ಪಿ, ಎಸ್ಡಿಪಿಐ ಸೇರುತ್ತೇನೋ ಎಂಬುದನ್ನು 3 ವರ್ಷಗಳ ಬಳಿಕ ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಅವರ ಪಕ್ಷಾಂತರದ ಕುರಿತ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಪ್ರಮೋದ್ ಮುತಾಲಿಕ್ ಕೂಡ ತಮ್ಮ ಭಾಷಣದಲ್ಲಿ ನಯನಾ ಮೋಟಮ್ಮ ಅವರನ್ನು ಹೊಗಳಿ ಮಾತನಾಡಿರುವ ವಿಚಾರ ಸ್ವತಃ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೂ ಸೇರಿದಂತೆ ದಲಿತ, ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದೆ. ನಯನಾ ಅವರನ್ನು ಶಾಸಕಿಯನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಾಯಕರು, ಕಾರ್ಯಕರ್ತರು ಬೆವರು ಸುರಿಸಿದ್ದಾರೆ. ಇದನ್ನು ಕಡೆಗಣಿಸಿ ಸಂಘ ಪರಿವಾರದವರು ಒಂದು ಸಮುದಾಯ, ಪಕ್ಷದ ಪರವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಲ್ಲದೆ ಪಕ್ಷಾಂತರದ ಮಾತುಗಳನ್ನಾಡಿರುವುದು ಪಕ್ಷದ ವರಿಷ್ಠರಿಗೆ ಮಾಡಿದ ಅಪಮಾನವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
Leave feedback about this