ಬೆಂಗಳೂರು

ಶ್ರೀಗಳ ಹೇಳಿಕೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಸಿಎಂ

ಬೆಂಗಳೂರು:- ಕೆಲ ದಿನಗಳ ಹಿಂದೆ ರಂಭಾಪುರಿ ಶ್ರೀಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದು, ಗ್ಯಾರಂಟಿ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಿದ್ದಾರೆ. ಫ್ರೀ ಯೋಜನೆ ಬದಲು, ಕೆಲಸ ಮಾಡಲು ಅವಕಾಶ ನೀಡಿ. ಉದ್ಯೋಗ ಹೆಚ್ಚಿಸಿ ಎಂದು ಹೇಳಿದ್ದರು.

ಈ ಬಗ್ಗೆ ಹಲವರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದರು, ಕಾಂಗ್ರೆಸ್‌ ಹಲವು ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಬಿಜೆಪಿಗರು ರಂಭಾಪುರಿ ಶ್ರೀಗಳ ಪರವಾಗಿ ಮಾತನಾಡಿದರು.

ಸಚಿವ ಸತೀಶ್ ಜಾರಕಿಹೊಳಿ ಈ ಬಗ್ಗೆ ಮಾತನಾಡಿ, ಶ್ರೀಗಳು ರಾಜಕೀಯದ ಬಗ್ಗೆ ಮಾತನಾಡಬಾರದು. ರಾಜಕೀಯಕ್ಕೂ ಅವರಿಗೂ ಸಂಬಂಧವೇ ಇಲ್ಲವೆಂದು ಖಾರವಾಗಿಯೇ ಹೇಳಿದ್ದರು.

ಬಳಿಕ ಮಾತನಾಡಿದ್ದ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶ್ರೀಗಳಿಗೆ ಭಕ್ತರು ಯಾರಾದರೂ ಆ ರೀತಿ ಹೇಳಿರಬಹುದು. ಭಕ್ತರ ಭಾವನೆಯನ್ನು ಶ್ರೀಗಳು ಮಾತಿನಲ್ಲಿ ಹೇಳಿದ್ದಾರೆಂಬುದು ನನ್ನ ಅಭಿಪ್ರಾಯವೆಂದು ಹೇಳಿದ್ದರು.

ಇನ್ನು ಫೈನಲ್ ಆಗಿ ಸಿಎಂ ಸಿದ್ದರಾಮಯ್ಯ ರಂಭಾಪುರಿ ಶ್ರೀಗಳ ಹೇಳಿಕೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಗ್ಯಾರಂಟಿ ಯೋಜನೆ ನೀಡುವುದರಿಂದ ಸೋಮಾರಿಗಳಾಗುತ್ತೇವೆ ಎಂದು ಹೇಳಿದ್ದಾರೆ. ಈಗ ಹೆಣ್ಣು ಮಕ್ಕಳು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಅವರೆಲ್ಲರೂ ಸೋಮಾರಿಗಳಾಗಿದ್ದಾರಾ..? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಸ್‌ನಲ್ಲಿ ಫ್ರೀಯಾಗಿ ಓಡಾಡಿದ್ರೆ ಸೋಮಾರಿಗಳಾಗುತ್ತೀರಾ ನೀವು ಎಂದು ಸಿಎಂ ಪ್ರಶ್ನಿಸಿದ್ದಕ್ಕೆ, ಅಲ್ಲೇ ಇದ್ದ ಓರ್ವ ಮಹಿಳೆ ಇಲ್ಲಾ ಸರ್ ಇನ್ನೂ ಆಯಕ್ಟೀವ್ ಆಗಿದ್ದೇವೆ ಎಂದು ಉತ್ತರಿಸಿದ್ದಾರೆ. ಬಳಿಕ ಮಾತು ಮುಂದುವರಿಸಿದ ಸಿಎಂ ನೋಡಿ ಇನ್ನೂ ಆಯಕ್ಟೀವ್ ಆಗ್ತಾರಂತೆ ಎಂದು ನಕ್ಕರು.

ಇನ್ನು ಈಶ್ವರಾನಂದಪುರಿ ಶ್ರೀಗಳು ಈ ಬಗ್ಗೆ ಮಾತನಾಡಿದ್ದು, ಹೆಣ್ಣು ಮಕ್ಕಳು ಸಬಲರಾಗಲಿ ಎಂದು ಸರ್ಕಾರ 2 ಸಾವಿರ ರೂಪಾಯಿ ನೀಡಿದರೆ, ಅದನ್ನು ಬಿಟ್ಟಿ ಭಾಗ್ಯ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಬಡವರ ಪರವಾಗಿ ರಾಜ್ಯ ಸರ್ಕಾರ ಅನೇಕ ಭಾಗ್ಯಗಳನ್ನು ನೀಡಿದೆ. ಇಂಥ ಹೇಳಿಕೆ ಸಹಿಸಲು ಅಸಾಧ್ಯವಾದ ಹೇಳಿಕೆ ಎಂದಿದ್ದಾರೆ.