ದೆಹಲಿ:- ಭಾರತದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ಆಗಿವೆ. ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಡಿಜಿಟಲ್ ಕ್ರಾಂತಿಯೇ ಆಗಿದೆ. ಆದರೆ, ಅದೇ ಡಿಜಿಟಲ್ ಕ್ರಾಂತಿಯಿಂದ ಇದೀಗ ಹಲವು ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್ಟಿ ಪಾವತಿಸದ ಆರೋಪದ ಮೇಲೆ ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯವಹಾರಗಳು ಸೇರಿದಂತೆ ಅಂದಾಜು 13,000 ಸಣ್ಣ ವ್ಯಾಪಾರಿಗಳಿಗೆ ಶೋಕಾಸ್ ನೋಟಿಸ್ಗಳನ್ನು ನೀಡಿದೆ ಎನ್ನಲಾಗಿದ್ದು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
2022ನೇ ಸಾಲಿನ ಹಣಕಾಸು ವರ್ಷ ಹಾಗೂ 2025ರ ವರೆಗಿನ ಹಣಕಾಸು ವರ್ಷ ನಡುವೆ ನಡೆದಿರುವ ಯುಪಿಐ ವಹಿವಾಟುಗಳ ಮೇಲೆ ಕರ್ನಾಟಕ ವಾಣಿಜ್ಯ ಇಲಾಖೆಯು ಕಣ್ಣಿರಿಸಿದೆ. ಕಳೆದ ಆರು ತಿಂಗಳ ಕಾಲ ಈ ಬಗ್ಗೆ ಸಮಗ್ರ ತನಿಖೆಯನ್ನು ಮಾಡಿದ ಮೇಲೆ ಶೋಕಾಸ್ ನೋಟಿಸ್ಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಫೋನ್ಪೇ, ಗೂಗಲ್ ಪೇ, ಪೇಟಿಎಂ, ಭೀಮ್ ಸೇರಿದಂತೆ ಇನ್ನುಳಿದ ಪ್ರಮುಖ ಅಪ್ಲಿಕೇಶನ್ಗಳ ಮೂಲಕ ನಡೆದಿರುವ ವಹಿವಾಟುಗಳ ಇತಿಹಾಸ ಪರಿಶೀಲನೆ ಮಾಡಲಾಗಿದೆ. ಡಿಜಿಟಲ್ ವಹಿವಾಟು ಜಿಎಸ್ಟಿ ನೋಂದಣಿ ದಾಖಲೆಗಳೊಂದಿಗೆ ಹೊಂದಾಣಿಯಾಗಿದೆ ಎನ್ನಲಾಗಿದೆ.
ಯಾರು ಜಿಎಸ್ಟಿ ಪಾವತಿ ಮಾಡಬೇಕು: ದೇಶದಲ್ಲಿ ಯಾವುದೇ ವ್ಯಾಪಾರಿಯಾದರೂ ವಾರ್ಷಿಕವಾಗಿ 20 ಲಕ್ಷ ರೂಪಾಯಿಯ ಮೇಲೆ ಹಾಗೂ 40 ಲಕ್ಷ ರೂಪಾಯಿಗಿಂತಲೂ ಮೇಲೆ ವಹಿವಾಟು ನಡೆಸಿದರೆ, ಜಿಎಸ್ಟಿ ಪಾವತಿ ಮಾಡಬೇಕು. ಸರ್ವೀಸ್ ಆಧಾರಿತ ವ್ಯಾಪಾರಗಳಿಗೆ ವಾರ್ಷಿಕವಾಗಿ 20 ಲಕ್ಷ ಮತ್ತು ಸರಕು – ಸಾಗಾಣಿಕೆ ಹಾಗೂ ಸರ್ವೀಸ್ಗೆ 40 ಲಕ್ಷ ರೂಪಾಯಿಯ ವರೆಗೂ ವಿನಾಯಿತಿ ಇರಲಿದೆ. ಇದಕ್ಕಿಂತ ಹೆಚ್ಚು ಅಥವಾ ಈ ಮಿತಿ ಮುಟ್ಟಿದರೆ ನೀವು ಜಿಎಸ್ಟಿ ವ್ಯಾಪ್ತಿಗೆ ಸೇರ್ಪಡೆ ಆಗಲಿದ್ದೀರಿ ಎಂದು ಹೇಳಲಾಗಿದೆ.
ಇದೀಗ ವಾಣಿಜ್ಯ ಇಲಾಖೆಯು ಡಿಜಿಟಲ್ ವ್ಯಾಪಾರದ ಮೇಲೆ ಕಣ್ಣಿಟ್ಟಿರುವುದರಿಂದಾಗಿ ಮುಂದಿನ ದಿನಗಳಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಇನ್ನಷ್ಟು ಕಡಿಮೆ ಆಗಬಹುದು. ಜನ ಹಣ ವಹಿವಾಟು ಪ್ರಕ್ರಿಯೆಗೆ ಮರಳುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವು ಅಂಗಡಿಗಳಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಬೇಡ. ದುಡ್ಡು ಕೊಡಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೇವಲ ವಹಿವಾಟುಗಳನ್ನು ಮಾತ್ರ ನೋಡುತ್ತಿವೆ. ಆದರೆ, ಲಾಭ – ನಷ್ಟ ಹಾಗೂ ಹೂಡಿಕೆ ವಿಚಾರಗಳನ್ನು ನೋಡುತ್ತಿಲ್ಲ ಎಂದು ಸಣ್ಣ ವ್ಯಾಪಾರಿಗಳು ದೂರಿದ್ದಾರೆ.
ಸಹಾಯವಾಣಿ ಪ್ರಾರಂಭಿಸಿದ ಬಿಜೆಪಿ: ಇನ್ನು ಕರ್ನಾಟಕದಲ್ಲಿ ಗೂಗಲ್ ಪೇ, ಫೋನ್ ಪೇ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಈ ಸಂಬಂಧ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಜಿ.ಎಸ್.ಟಿ. ವ್ಯಾಪ್ತಿಗೆ ಒಳಪಡದಿರುವ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯು ನೋಟೀಸ್ ನೀಡುವುದರ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕ ವತಿಯಿಂದ ಸಣ್ಣ ವ್ಯಾಪಾರಿಗಳ ಹಿತರಕ್ಷಣೆಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು. ಸಮಸ್ಯೆಗಳಿದ್ದಲ್ಲಿ ನಮ್ಮ ಸಹಾಯವಾಣಿ ಸಂಖ್ಯೆ – 8884245123 ಕ್ಕೆ ಸಂಪರ್ಕಿಸಿ. ರಾಜ್ಯದ ಬೊಕ್ಕಸ ತುಂಬಿಕೊಳ್ಳಲು ಸಣ್ಣ ವ್ಯಾಪಾರಿಗಳ ನೆಮ್ಮದಿ ಕೆಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಸದಾ ಹೋರಾಡಲಿದ್ದೇವೆ. #CongressLootsKarnataka ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಟ್ವೀಟ್ ಮಾಡಿದ್ದಾರೆ.
Leave feedback about this