ಕಲಬುರಗಿ:- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಲಬುರಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇತ್ತೀಚೆಗೆ ಅವರು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಆಧಾರವನ್ನಾಗಿ ಮಾಡಿಕೊಂಡು, ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ₹5 ಲಕ್ಷ ನಗದು ನೀಡಲಾಗುತ್ತದೆ ಎಂಬ ಅವರ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಗಿದೆ.
ಈ ಬಗ್ಗೆ ಖಿದ್ಮತ್ ಎ ಮಿಲ್ಲತ್ ಕಮಿಟಿಯ ಅಧ್ಯಕ್ಷ ಜುನೈದ್ ಖುರೇಶಿ ಅವರು ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಈ ದೂರು ಆಧರಿಸಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ IPC ಸೆಕ್ಷನ್ 196, 299, 353(1)(c), 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜುನೈದ್ ಖುರೇಶಿ ಅವರು ನೀಡಿದ ದೂರಿನ ಪ್ರಕಾರ, ಶಾಸಕ ಯತ್ನಾಳ್ ಅವರು ಹಲವು ವರ್ಷಗಳಿಂದ ಸಮುದಾಯಗಳನ್ನು ವಿಭಜಿಸುವ ರೀತಿಯಲ್ಲಿ ಹಾಗೂ ಧಾರ್ಮಿಕ ಗುಂಪುಗಳನ್ನು ಗುರಿಯಾಗಿಸುವ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ಈ ಬಗೆಯ ಹೇಳಿಕೆಗಳು ಸಮಾಜದಲ್ಲಿ ದ್ವೇಷ ಸೃಷ್ಟಿಸುತ್ತಿದ್ದು, ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗಷ್ಟೇ ಕೊಪ್ಪಳದಲ್ಲಿ ನೀಡಿದ ಭಾಷಣದಲ್ಲಿ, ಶಾಸಕರು “ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ತಲಾ ₹5 ಲಕ್ಷ ನಗದು ನೀಡೋದಾಗಿ ಹೇಳಿದ್ದರು. ಈ ಹೇಳಿಕೆ, ಒಂದು ಸಮುದಾಯವನ್ನು ಪ್ರಚೋದಿಸುವ ಮತ್ತು ಇನ್ನೊಂದು ಸಮುದಾಯವನ್ನು ಗುರಿಯಾಗಿಸುವ ಉದ್ದೇಶಪೂರಿತವಾಗಿದ್ದು, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲೆಯ ರೋಜಾ ಪೊಲೀಸ್ ಠಾಣೆಯವರು ನಿಗದಿತ ವಿಧಾನದಂತೆ ಎಫ್ಐಆರ್ ದಾಖಲಿಸಿದ್ದಾರೆ. ಈ ಕುರಿತು ಇನ್ನಷ್ಟು ತನಿಖೆ ಪ್ರಾರಂಭವಾಗಿದ್ದು, ಸಂಬಂಧಪಟ್ಟ ದಾಖಲೆಗಳು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.
Leave feedback about this